For proper results, open this webpage in Internet Explorer

Saturday, October 25, 2008

ಬಂದರೂ ಬಾರದ ಹಾಗೇ

ಬಂದರೂ ಬಾರದ ಹಾಗೇ ಯಾಕೆ ಸುಮ್ಮನೆ ನಾವು

ಹಾದಿ ಕಾಯುತ್ತೇವೋ

ಬಂದರು ಬಾರದ ಹಾಗೇ ಇರುವಂಥವರ!



ಒಳಗಿನ ಬೆಂಕಿ ನಾಲಿಗೆಯ ಮೇಲಾಡಿ

ಕಣ್ಣ ಕೊನೆಯಿಂದ ಕಿಡಿಕಾರಿ

ಚಟಪಟ ಸಿಡಿದುಹೊರಟು ಹೋದವರ

ಕಾಯುತ್ತೇವೆ ಯಾಕೆ?

ಹೊಡೆದುಕೊಳ್ಳುವ ಹೃದಯವ ಅಂಗೈಲಿಟ್ಟುಕೊಂಡು




ಇಲ್ಲವೇ ನಿಮ್ಮಲ್ಲಿ? ಇರಲಿ ಬಿಡಿ

ಬಂದಾರು; ಸರಿ. ಬಂದರೆ ತಿಳಿಸುವೆ,

ಬಂದರೆಂದು.

(ಆಚೆ ದನಿಗೇನು ಗೊತ್ತು ಬಾರದೆಯು ಇರಬಹುದೆಂದು)



ಇನ್ನೇನು ಮುಗಿಯುತ್ತದೆ ಕಾದು ಕೂರವ ಹೊತ್ತು,

ಯಾರಾದರು ಬಂದು ಹೃದಯದ ಬಾಗಿಲ ಬಡಿದು

ತಿಳಿಸಿಬಿಡಲಿ.



ಏನ ಕಾಯುತ್ತೇವೆ? ಯಾಕೆ ಕಾಯುತ್ತೇವೆ?

ಬರುವುದನ್ನೋ? ಬಾರದಿರುವುದನ್ನೋ?



ತೆರೆದ ಬಾಗಿಲಿನಿಂದ ಕತ್ತಲು ನುಗ್ಗಿದ ಹಾಗೆ

ಕಡೆಗೂ ಬಂದರೂ ಬಾರದ ಹಾಗೇ!!!!!!

Thursday, October 23, 2008

ಯಾರು ಜೀವವೆ ಯಾರು ಬಂದವರೊ

ಯಾರು ಜೀವವೆ ಯಾರು ಬಂದವರೊ

ಭಾವನೆಗಳನೇರಿ

ಒಣಗಿದೆನ್ನೆದೆಗೆ ಮಳೆಯ ತಂದವರೊ

ಬಿಸಿಲ ತೆರೆಯ ಸೀಳಿ || ಯಾರು ||



ಬಾನ ನೀಲಿಯಲಿ ಕರಿಬಿಳಿ ಬಣ್ಣದ

ಗಾನ ಚಿಮ್ಮಿದವರೊ

ಕಾನು ಮಲೆಗಳಲಿ ಚಿಗುರು ಹೂವುಗಳ

ಚಪ್ಪರ ಬೆಳೆದವರೊ || ಯಾರು ||



ನಸುಕಿನ ಬೆಳಕನು ಮಂಜಿನ ತೆರೆಯಲಿ

ಜಾಲಿಸಿ ಬಿಡುವವರೊ

ಮಣ್ಣಿನ ಮುಖದಲಿ ಹಸುರಿನ ಸುಂದರ

ಕಣ್ಣ ಬಿಡಿಸಿದವರೊ || ಯಾರು ||



ಯಾರು ಜೀವವೆ ಘಳಿಗೆ ಹಿಂದೆ ಈ

ಮನದಲಿ ಮೂಡಿದರೊ

ಯಾರು ಎಂದು ನಾ ತಿಳಿಯುವ ಮೊದಲೆ

ಕಾಣದೆ ಸರಿದವರೊ || ಯಾರು ||

ಮುಚ್ಚು ಮರೆಯಿಲ್ಲದೆಯೆ



ಮುಚ್ಚು ಮರೆಯಿಲ್ಲದೆಯೆ ನಿನ್ನ ಮುಂದೆಲ್ಲವನು

ಬಿಚ್ಚಿಡುವೆ ಓ ಗುರುವೇ ಅಂತರಾತ್ಮ

ಪಾಪವಿದೆ ಪುಣ್ಯವಿದೆ ನರಕವಿದೆ ನಾಕವಿದೆ

ಸ್ವೀಕರಿಸು ಓ ಗುರುವೇ ಅಂತರಾತ್ಮ || ಮುಚ್ಚು ||



ರವಿಗೆ ಕಾಂತಿಯನೀವ ನಿನ್ನ ಕಣ್ಣೀಕ್ಷಿಸಲು

ಪಾಪ ತಾನುಳಿಯುವುದೆ ಪಾಪವಾಗಿ

ಗಂಗೆ ತಾನೋದ್ಭವಿಪ ನಿನ್ನಡಿಯ ಸೋಕಿಂಗೆ

ನರಕ ತಾನುಳಿಯುವುದೆ ನರಕವಾಗಿ || ಮುಚ್ಚು ||



ಶಾಂತ ರೀತಿಯೊಳಿಮ್ಮಿ ಕದಡಿರುವುದೆನ್ನಾತ್ಮ

ನಾಂತ ರೀತಿಯು ಅದೆಂತೊ ಓ ಅನಂತ

ನನ್ನ ನೀತಿಯ ಪುರುಡಿನಿಂದೆನ್ನ ರಕ್ಷಿಸೆ

ನಿನ್ನ ನೀತಿಯ ಬೆಳಕಿನ ಆನಂದಕ್ಕೆ || ಮುಚ್ಚು ||

Friday, July 11, 2008

ಅಮ್ಮ ನಿನ್ನ ಎದೆಯಾಳದಲ್ಲಿ

ಕವಿ: ಬಿ ಆರ್ ಲಕ್ಷ್ಮಣ್ ರಾವ್

ನೀವು ಹಾಡನ್ನು ಈಗ ಕೇಳಲು ಇಲ್ಲಿ ಕ್ಲಿಕ್ ಮಾಡಿ - "ಹೊಸ ಅಂಶ"

ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು

ಮಿಡುಕಾಡುತಿರುವೆ ನಾನು

ಕಡಿಯಾಲೊಲ್ಲೇ ಕರುಳ ಬಳ್ಳಿ

ಒಲವೂಡುತಿರುವ ತಾಯೆ ಬಿಡದ ಭುವಿಯ ಮಾಯೆ.




ನಿನ್ನ ರಕ್ಷೆಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ ದೂಡು ಹೊರಗೆ ನನ್ನ

ಓಟ ಕಲಿವೆ ಒಳನಾಟ ಕಲಿವೆ

ನಾ ಕಲಿವೆ ಊರ್ಧ್ವಗಮನ

ಅಗಾಧ ಗಗನ || ಅಮ್ಮ ನಿನ್ನ ||




ಮೇಲೆ ಹಾರಿ ನಿನ್ನ ಸೆಳೆತ ಮೀರಿ ನಿರ್ಭರ ಸ್ಥಿತಿಗೆ ತಲುಪಿ ಬ್ರಹ್ಮಾಂಡವನ್ನೇ ಬೆದಕಿ

ಇಂಧನ ತೀದಲು ಬಂದೆ ಬರುವೆನು

ಮತ್ತೆ ನಿನ್ನ ತೊಡೆಗೆ

ಮೂರ್ತ ಪ್ರೇಮದೆಡೆಗೆ || ಅಮ್ಮ ನಿನ್ನ ||

ಆನಂದಮಯ ಈ ಜಗ ಹೃದಯ

ಕವಿ: ರಾಷ್ಟ್ರಕವಿ ಕುವೆಂಪು

ಕವಿಯ ಬಗ್ಗೆ:
ಪೂರ್ತಿ ಹೆಸರು: ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
ಕಾಲ: ಡಿಸೆಂಬರ್ ೨೯, ೧೯೦೪ - ನವೆಂಬರ್ ೧೦, ೧೯೯೪
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೀವು ಹಾಡನ್ನು ಈಗ ಕೇಳಲು ಇಲ್ಲಿ ಕ್ಲಿಕ್ ಮಾಡಿ - "ಹೊಸ ಅಂಶ"


ಆನಂದಮಯ ಜಗಹೃದಯ ಏತಕೆ ಭಯ ಮಾಣೋ

ಸೂರ್ಯೋದಯ ಚಂದ್ರೋದಯ ದೇವರ ದಯ ಕಾಣೋ

ಆನಂದಮಯ ಜಗಹೃದಯ



ಬಿಸಿಲಿದು ಬರಿ ಬಿಸಿಲಲ್ಲವೋ ಸೂರ್ಯನ ಕೃಪೆ ಕಾಣೋ

ಸೂರ್ಯನು ಬರಿ ರವಿಯಲ್ಲವೋ ಭ್ರಾಂತಿಯ ಮಾಣೋ

ಆನಂದಮಯ ಜಗಹೃದಯ.



ರವಿವದನವೇ ಶಿವಸದನವೊ ಬರಿ ಕಣ್ಣದು ಮಣ್ಣೋ

ಶಿವನಿಲ್ಲದೆ ಸೌಂದರ್ಯವೇ ಶವ ಮುಖದ ಕಣ್ಣೋ

ಆನಂದಮಯ ಜಗಹೃದಯ.



ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ

ಶಿವಕಾಣದೆ ಕವಿ ಕುರುಡನೋ ಶಿವ ಕಾವ್ಯದ ಕಣ್ಣೋ

ಆನಂದಮಯ ಜಗಹೃದಯ.

COMMENTS